‘ನಮ್ಮ ಬಾಯಿಗೆ ಮಣ್ಣು ಹಾಕಿಬಿಟ್ರಿ’ : ಸಿಎಂ ಯಡಿಯೂರಪ್ಪ ವಿರುದ್ಧ ಸಿಡಿದೆದ್ದ ಅನರ್ಹ ಶಾಸಕರು?
ನಮ್ಮ ಬಾಯಿಗೆ ಮಣ್ಣು ಹಾಕಿಬಿಟ್ಟಿರಿ. ನಮಗೆ ವಿಷ ಕೊಟ್ಟು ಬಿಡಿ. ನಮ್ಮಿಂದ ನೀವು ಸಿಎಂ ಆದ್ರಿ. ನಾವಿನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರ ವಿರುದ್ಧ ಅತೃಪ್ತ ಶಾಸಕರು ಸಿಡಿದೆದ್ದಿದ್ದಾರೆ ಎನ್ನಲಾಗುತ್ತಿದೆ.
ಅಕ್ಟೋಬರ್ 21ಕ್ಕೆ 15 ಜಿಲ್ಲೆಯಲ್ಲಿ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅನರ್ಹ ಶಾಸಕರ ಜೊತೆ ಚರ್ಚೆ ಅರಣ್ಯ ಭವನದ ಗೆಸ್ಟ್ ಹೌಸ್ ನಲ್ಲಿ ಸಭೆ ಹಮ್ಮಿಕೊಂಡಿದ್ದರು. ಈ ವೇಳೆ ಗೊಚ್ಚಿಗೆದ್ದ ಶಾಸಕರು ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಜೆಡಿಎಸ್ ಅನರ್ಹ ಶಾಸಕ ಎಚ್ ವಿಶ್ವನಾಥ್ ಸೇರಿದಂತೆ ಎಲ್ಲಾ ಅನರ್ಹ ಶಾಸಕರು ಹಾಜರಾಗಿದ್ದಾರೆ. ಅಲ್ಲದೆ ಗೋವಿಂದ ಕಾರಜೋಳ, ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ್ ಸವದಿ ಕೂಡ ಯಡಿಯೂರಪ್ಪ ಜೊತೆಯಲ್ಲೇ ಇದ್ದಾರೆ ಎನ್ನಲಾಗಿದೆ.
ಬಿಎಸ್ವೈ ಅನರ್ಹ ಶಾಸಕರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಸಭೆಯಲ್ಲಿ ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಬಾರಿ ಅತೃಪ್ತರನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ. ನೀವ್ಯಾರೂ ಹೆದರಬೇಡಿ ಎಂದು ಬಿಎಸ್ವೈ ಅಭಯ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಶಾಸಕ ಸ್ಥಾನದ ಅನರ್ಹತೆಯನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟಿನಲ್ಲಿ ಅನರ್ಹರು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ತ್ವರಿತ ವಿಚಾರಣೆಗೆ ನಿರಾಕರಿಸಿತ್ತು. ಅಲ್ಲದೆ ಸೋಮವಾರ ಪ್ರಕರಣ ವಿಚಾರಣೆಗೆ ಬಂದರು ಕೂಡ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದ ಪರಿಣಾಮ ಪ್ರಕರಣ ವಿಚಾರಣೆ ಮುಂದೂಡಲಾಗಿತ್ತು. ಈಗ ಸೆ.22ಕ್ಕೆ ವಿಚಾರಣೆ ನಡೆಯಲಿದ್ದು, ವಿಚಾರಣೆ ದೀರ್ಘ ಸಮಯ ತಗೆದುಕೊಂಡರೆ ಅತಂತ್ರರು ಚುನಾವಣೆಗೆ ನಿಲ್ಲುವ ಕನಸು ಭಗ್ನಗೊಳ್ಳಲಿದೆ.