‘ನನಗೂ ಕೆಟ್ಟ ಭಾಷೆ ಬಳಕೆ ಮಾಡಲು ಬರುತ್ತೆ’ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿ
ಸಿದ್ಧರಾಮಯ್ಯ ಮಾಜಿ ಮುಖ್ಯಮಂತ್ರಿ ಎಂದು ಸುಮ್ಮನಿದ್ದೇನೆ. ಇಲ್ಲವಾಗಿದ್ದರೆ, ಅವರ ವಿರುದ್ಧವೂ ಕೆಟ್ಟ ಭಾಷೆ ಬಳಸುತ್ತಿದ್ದೆ. ನನಗೂ ಕೆಟ್ಟ ಭಾಷೆ ಬಳಸುವುದು ಗೊತ್ತಿದೆ. ನಾನು ಬಹಳ ತಡೆದುಕೊಂಡಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಮಂತ್ರಿ ಮೋದಿ ವಿರುದ್ಧ ಸಿದ್ಧರಾಮಯ್ಯನವರು ಬಳಸುತ್ತಿರುವ ಭಾಷೆ ಸರಿಯಿಲ್ಲ. ಸಿದ್ಧರಾಮಯ್ಯ ವಿರುದ್ಧ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹರಿಹಾಯ್ದಿದ್ದಾರೆ.
ಸಿದ್ಧರಾಮಯ್ಯನವರಿಗೆ ವ್ಯಯಕ್ತಿಕವಾಗಿ ಪ್ರಾರ್ಥನೆ ಮಾಡುತ್ತೇನೆ. ವಿರೋಧ ಪಕ್ಷವಾಗಿ ಬೇಕಾದಷ್ಠು ಟೀಕೆ ಮಾಡಿ ತೊಂದರೆ ಇಲ್ಲ. ಆದರೆ, ನೀವು ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರ ಬಗ್ಗೆ ವ್ಯಯಕ್ತಿಕ ಟೀಕೆ ಮಾಡುವುದು ಸರಿಯಿಲ್ಲ. ನರೇಂದ್ರ ಮೋದಿ, ಕೋಮುವಾದಿ, ಫೋಟೋ ತೆಗೆಸಿಕೊಳ್ಳಲು ವಿದೇಶ ಪ್ರವಾಸಕ್ಕೆ ಹೋಗುತ್ತಾರೆ ಎನ್ನುತ್ತಾರೆ.
ಸುಳ್ಳು ಹೇಳುತ್ತಾರೆ ಎಂದು ಸಿದ್ಧರಾಮಯ್ಯ ಹಗುರವಾದ ಪದ ಬಳಕೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಳ್ಳುತ್ತಾರೆ, ನಾಚಿಕೆ ಆಗಲ್ವ ಎಂದು ಟೀಕೆ ಮಾಡುತ್ತಾರೆ. ರೈತ ನಾಯಕರಾಗಿರುವ ಯಡಿಯೂರಪ್ಪ, ರೈತರ ಪರವಾಗಿ ಹಲವಾರು ಹೋರಾಟ ಮಾಡಿದವರು. ಸಿದ್ಧರಾಮಯ್ಯನವರ ಭಾಷೆ ಇದು ಸರಿಯಲ್ಲ.
ಇಡೀ ಪ್ರಪಂಚ ಮೆಚ್ಚಿದ ವ್ಯಕ್ತಿ ಬಗ್ಗೆ ಹಗುರವಾದ ಮಾತುಗಳು ಸಲ್ಲದು. ಅದರಲ್ಲೂ ನೆರೆ ವಿಚಾರದಲ್ಲಿಯೂ ರಾಜಕೀಯ ಮಾಡಬೇಡಿ. ರಾಜ್ಯದಲ್ಲಿ ನೆರೆ ಬಂದಿದ್ದು, ಹಿಂದೆ ಯಾವುದೇ ಸರ್ಕಾರ ನೀಡದ ರೀತಿಯಲ್ಲಿ ನಮ್ಮ ಸರ್ಕಾರ ಪರಿಹಾರ ನೀಡುತ್ತಿದೆ. ನಮ್ಮ ನಿರೀಕ್ಷೆ ಮೀರಿ ಪ್ರಧಾನಿ ನರೇಂದ್ರ ಮೋದಿ ಪರಿಹಾರ ಬಿಡುಗಡೆ ಮಾಡುವ ಆಶಯ ಹೊಂದಿದ್ದೇವೆ. ನಾವು ಅತಿ ಹೆಚ್ಚು ಅನುದಾನ ತರುವ ನಿರೀಕ್ಷೆಯಲ್ಲಿದ್ದೇವೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಲೆಷ್ಯಾಯದಲ್ಲಿ ಜೂಜಾಡಿದ್ದಾರೆ ಎಂಬ ಆರೋಪದ ವಿಚಾರ. ಅದು ಅವರ ವ್ಯಯಕ್ತಿಕ ವಿಚಾರ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.