ಜಾಮೀನು ಅರ್ಜಿ ವಿಚಾರಣೆ : ಇಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಡಿಕೆಶಿ
ಬಹುಕೋಟಿ ಅಕ್ರಮ ಹಣ ಸಂಗ್ರಹ ಆರೋಪದಡಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗದಾ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಂದು ನ್ಯಾಯಲಯದ ವಿಚಾರಣೆ ಒಳಪಡಿಸಲಾಗುವುದು. ನಂತರ ಅವರು ಮನೆಗೋ, ಜೈಲಿಗೋ, ಇಡಿ ಕಸ್ಟಡಿಗೋ ಎನ್ನುವುದು ಇಂದು ನಿರ್ಧಾರವಾಗಲಿದೆ.
ಇಡಿ ಕಸ್ಟಡಿ ಅವಧಿ ಇಂದು ಅತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇಂದೇ ಶಿವಕುಮಾರ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಲಿದೆ. ಪುತ್ರಿ ಐಶ್ವರ್ಯ ವಿಚಾರಣೆ ನಿನ್ನೆಯಿಂದ ಆರಂಭಗೊಂಡಿದೆ. ಐಶ್ವರ್ಯ ನೀಡಿದ ಉತ್ತರಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರನ್ನು ಪ್ರಶ್ನಿಸಬೇಕು. ಹೀಗಾಗಿ ಮತ್ತೆ 4 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೇಳಬಹುದು.
ಇಡಿ ವಾದವನ್ನು ಪುರಸ್ಕರಿಸಿ ಮತ್ತೆ 4 ದಿನ ಕಸ್ಟಡಿಗೆ ನೀಡಬಹುದು. ಆರೋಗ್ಯ ಸಮಸ್ಯೆ ಇರುವ ಕಾರಣ ಮಧ್ಯಂತರ ಜಾಮೀನು ಮಂಜೂರು ಮಾಡಬಹುದು. ಮಧ್ಯಂತರ ಜಾಮೀನು ಮಂಜೂರು ಮಾಡುವುದು ಕಷ್ಟ ಎನ್ನಲಾಗುತ್ತಿದೆ. ಒಂದು ವೇಳೆ ಜಾಮೀನು ನೀಡದೇ ಮತ್ತು ಇಡಿ ಕಸ್ಟಡಿ ನೀಡದೇ ಇದ್ದರೆ ನ್ಯಾಯಾಂಗ ಬಂಧನ ವಿಧಿಸುತ್ತದೆ. ನ್ಯಾಯಾಂಗ ಬಂಧನ ವಿಧಿಸಿದರೆ ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ. ಜಾಮೀನು ಅರ್ಜಿಯ ವಿಚಾರಣೆ ನಡೆದರೆ ವಾದ, ಪ್ರತಿವಾದ ಮಾಡಬೇಕಾಗುತ್ತದೆ. ಬಳಿಕ ಕೆಲ ದಿನಗಳ ನಂತರ ಜಾಮೀನು ಆದೇಶ ಪ್ರಕಟವಾಗಬಹುದು. ಅಲ್ಲಿಯವರೆಗೆ ಡಿಕೆಶಿ ತಿಹಾರ್ ಜೈಲಿನಲ್ಲಿರಬೇಕಾಗುತ್ತದೆ.
ನಿನ್ನೆ ಒಂದು ಕಡೆ ಐಶ್ವರ್ಯ ವಿಚಾರಣೆ ನಡೆದಿದ್ದರೆ ಮಗದೊಂದು ಕಡೆ ಡಿಕೆಶಿ ವಿಚಾರಣೆ ನಡೆಯಿತು. ಆದರೆ, ವಿಚಾರಣೆ ವೇಳೆ ಡಿಕೆಶಿಗೆ ಹೈಬಿಪಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಸಂಬಂಧಿ ಶಾಸಕ, ಡಾ. ರಂಗನಾಥ್ ಅವರು ತಪಾಸಣೆ ಮಾಡಿದರು. ನಂತರ ಡಿಕೆಶಿ ಅವರನ್ನು ಹತ್ತಿರದ ಆರ್ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ, ಡಿಕೆ ಸುರೇಶ್ ಆಪ್ತ ವೈದ್ಯ ಜುಬಿನ್ ಸಲಹೆ ಮೇರೆಗೆ ಡಿಕೆಶಿಗೆ ಔಷಧಿ ತಂದುಕೊಟ್ಟರು. ಬಳಿಕ ಇಸಿಜಿ ಮಾಡಿದ್ದು, ಡಿಕೆಶಿ ವಿಶ್ರಾಂತಿ ಪಡೆಯುತ್ತಿದ್ದಾರೆ.