ಕೆ.ಆರ್.ಪೇಟೆ ಯಡಿಯೂರಪ್ಪ ಹುಟ್ಟಿದ ಊರಲ್ಲ, ಹುಟ್ಟಿ ಬಿಟ್ಟೋದ ಊರು : ಸಿಎಂಗೆ ಜಫ್ರುಲ್ಲಾಖಾನ್ ಟಾಂಗ್
ಎಲ್ಲಾ ಕಡೆ ನಮ್ಮ ಪಕ್ಷದಿಂದ ಅಭ್ಯರ್ಥಿ ಹಾಕಿದ್ದೇವೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳ ಸಹವಾಸ ನೋಡಿದ್ದೇವೆ. ನಮಗೆ ಆ ಎರಡೂ ಪಕ್ಷಗಳ ಮೇಲೆ ವಿಶ್ವಾಸ ಇಲ್ಲ. ಹೆಚ್ಡಿಡಿ, ಹೆಚ್ಡಿಕೆ ಸಾಧನೆ ಹೇಳಿ ಮತ ಕೇಳ್ತೀವಿ. ಪಕ್ಷದ ಕಾರ್ಯಕರ್ತರೇ ನಮ್ಮ ಸೈನಿಕರು. ನಮ್ಮ ಕಷ್ಟಕ್ಕೆ ಫಲ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಕೆ.ಆರ್.ಪೇಟೆ ಮತಯಾಚನೆ ವೇಳೆ ಹೇಳಿದ್ದಾರೆ.
ಪಕ್ಷ ನನಗೆ ಸ್ಟಾರ್ ಪ್ರಚಾರಕರ ಸಾಲಿನಲ್ಲಿ ಅವಕಾಶ ಕೊಟ್ಟಿದೆ. ವರಿಷ್ಟರು ಹೇಳುವ ಕಡೆಯಲ್ಲೆಲ್ಲ ಪ್ರಚಾರ ಮಾಡ್ತೀನಿ. ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಗೆಲ್ಲುತ್ತೆ. ಜನ ನ್ಯಾಯ, ಅನ್ಯಾಯ, ಧರ್ಮ, ಅಧರ್ಮ ಎಲ್ಲವನ್ನೂ ಯೋಚಿಸ್ತಾರೆ. ಹಣ, ತೋಳ್ಬಲಕ್ಕೆ ಜನ ಸೋಲಲ್ಲ. ಉತ್ತಮ ವ್ಯಕ್ತಿಗೆ ಜನ ಮತ ನೀಡ್ತಾರೆ.
ಜೆಡಿಎಸ್ ಅಭ್ಯರ್ಥಿ ಪರ ಶಾಸಕರು ನಿಲ್ಲದ ವಿಚಾರಕ್ಕೆ ಮಾತನಾಡಿ, ನಮ್ಮ ಎಲ್ಲಾ ಅಭ್ಯರ್ಥಿಗಳನ್ನ ಗೆಲ್ಲಿಸೋದೇ ಗುರಿ. ನಾಮಪತ್ರ ಹಿಂಪಡೆಯಲು ಇನ್ನು ಕಾಲಾವಕಾಶ ಇದೆ. ಆ ಬಳಿಕ ಎಲ್ಲರೂ ಒಟ್ಟಾಗಿ ಪ್ರಚಾರ ಮಾಡ್ತೀವಿ.
ಜೆಡಿಎಸ್ ವರಿಷ್ಟರಿಂದ ಕೆ.ಆರ್.ಪೇಟೆ ನಿರ್ಲಕ್ಷ್ಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾವ್ಯಾರೂ, ಯಾವ ಕ್ಷೇತ್ರವನ್ನೂ ನಿರ್ಲಕ್ಷ್ಯ ಮಾಡಿಲ್ಲ. ಹೆಚ್ಡಿಡಿ, ಹೆಚ್ಡಿಕೆ ಅವರೇ ದೇವರಾಜ್ ಅವರನ್ನ ಅಭ್ಯರ್ಥಿ ಮಾಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡ್ತಾರೆ. ನಿಖಿಲ್ ಚುನಾವಣೆಗೆ ತೋರಿದ ಆಸಕ್ತಿ, ಉಪ ಚುನಾವಣೆಗೆ ತೋರುತ್ತಿಲ್ಲ ಎಂಬುದು ಸುಳ್ಳು. ವೀಕ್ ಇರುವ ಕಡೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡ್ತಿದ್ದೇವೆ.
ಕೆ.ಆರ್.ಪೇಟೆ ನಮ್ಮ ಹುಟ್ಟೂರು ಎಂದು ಪ್ರಚಾರ ಮಾಡ್ತಿರುವ ಸಿಎಂ ಬಿಎಸ್ವೈಗೆ ಜಫ್ರುಲ್ಲಾಖಾನ್ ಟಾಂಗ್ ಕೊಟ್ಟಿದ್ದಾರೆ. ಇದು ಕೆ.ಆರ್.ಪೇಟೆ ಯಡಿಯೂರಪ್ಪ ಹುಟ್ಟಿದ ಊರಲ್ಲ ಹುಟ್ಟಿ, ಬಿಟ್ಟೋದ ಊರು.
ಹಿಂದೆ, ಅಧಿಕಾರ ಇದ್ದಾಗೆಲ್ಲ ಈ ಕಡೆ ತಿರುಗಿ ನೋಡಲಿಲ್ಲ. ಈಗ ಚುನಾವಣೆ ಬಂದಾಗ ನಮ್ಮ ಹುಟ್ಟೂರು ನೆನಪಾಯ್ತ? ಇದು ಜನರ ದಾರಿ ತಪ್ಪಿಸುವ ಹೇಳಿಕೆ. ಯಡಿಯೂರಪ್ಪ ನಮ್ಮ ಹುಟ್ಟೂರು ಅಂತಾ ಹೇಳಬಾರದು. ಹುಟ್ಟೂರು ಅಂತೇಳಿ ಪ್ರಚಾರ ಮಾಡೋದು ಸರಿಯಲ್ಲ. ಕೇಂದ್ರ, ರಾಜ್ಯ ಸರ್ಕಾರದ ವಾಸ್ತವ ಸ್ಥಿತಿಯನ್ನ ಜನತೆಗೆ ಹೇಳಲಿ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಕಿಡಿ ಕಾರಿದರು.