ಉಪಚುನಾವಣೆಯಲ್ಲಿ ಜೆಡಿಎಎಸ್ ಸ್ವತಂತ್ರವಾಗಿ ಸ್ಪರ್ಧೆ : ಹುಣಸೂರು ಗೆಲ್ಲಲೇಬೇಕು – ಹೆಚ್ ಡಿಕೆ
ಕೇಂದ್ರ ಚುನಾವಣಾ ಆಯೋಗ ಅಕ್ಟೋಬರ್ 21ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ್ದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಉಪಚುನಾವಣೆಯಲ್ಲಿ ಜೆಡಿಎಎಸ್ ಸ್ವತಂತ್ರವಾಗಿ ಸ್ಪರ್ಧೆಸಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಿಗೆ ಸ್ವತಂತ್ರವಾಗಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸುವುದಾಗಿ ಘೊಷಣೆ ಮಾಡಿದ್ದಾರೆ. ಉಪ ಚುನಾವಣೆ ಫಲಿತಾಂಶದ ಮೇಲೆ ರಾಜ್ಯದ ಮುಂದಿನ ರಾಜಕೀಯ ದಿಕ್ಕು ನಿರ್ಧಾರವಾಗುತ್ತದೆ. ಎಲ್ಲಾ ಕ್ಷೇತ್ರಗಳಿಗೆ ಸ್ವತಂತ್ರವಾಗಿ ಜೆಡಿಎಸ್ ಅಭ್ಯರ್ಥಿ ಹಾಕುತ್ತೇವೆ. ಹುಣಸೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲೇ ಬೇಕು. ನನ್ನ ಇಡೀ ಸಮಯವನ್ನು ಹುಣಸೂರು ಚುನಾವಣೆ ಗೆಲ್ಲಲು ನೀಡುತ್ತೇನೆ ಎಂದರು.
ಕಾರ್ಯಕರ್ತರು ಉತ್ಸಾಹದಿಂದ ಹೊರಟರೆ ಯಾರ ಹಣ ಬಲವೂ ನಡೆಯಲ್ಲ. ಕೆಟ್ಟ ಸರ್ಕಾರದಲ್ಲಿ ನನಗೆ ಬೆಂಬಲ ಸರಿ ಇಲ್ಲದಿದ್ದಾಗಲೂ ರೈತರ ಪರ ಕೆಲಸ ಮಾಡಿದ್ದೇನೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಯಾರು ರೈತರ ಪರ ಇದ್ದಾರೆ ಅನ್ನೋದು ಜನ ಗಮನಿಸಲಿ. ಕೊಡಗು ಸ್ವಚ್ಛ ಮಾಡಿ ಅಂದರೆ ಮೈಸೂರನ್ನು ಸ್ವಚ್ಛ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಓಡಾಡುತ್ತಿದ್ದಾರೆ ಎಂದರು.