ಆಧುನಿಕ ತಂತ್ರಜ್ಞಾನ ಬಳಸಿ ಮೊಬೈಲ್ ಅಂತಾರಾಜ್ಯ ಕಳ್ಳರನ್ನು ಪತ್ತೆ ಮಾಡಿದ ಬಸವ ನಾಡಿನ ಯುವಕರು…
ಅಂತಾರಾಜ್ಯ ಮೊಬೈಲ್ ಕಳ್ಳನೊಬ್ಬನ್ನು ಯುವಕರ ತಂಡ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ವಿಜಯಪುರ ನಗರದ ಸ್ವಾಮಿ ವಿವೇಕಾನಂದ ಯುವ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ನೇತೃತ್ವದ ತಂಡ ಮೊಬೈಲ್ ಟ್ರ್ಯಾಕರ್ ಮೂಲಕ ಈ ಕಳ್ಳನನ್ನು ಪತ್ತೆ ಹಚ್ಚಿದ್ದು, ಇವರು ಧಾಳಿ ನಡೆಸಿದ ಸಂದರ್ಭದಲ್ಲಿ ಮೂರು ಜನ ಇತರ ಕಳ್ಳರು ಪರಾರಿಯಾಗಿದ್ದಾರೆ.
ವಿಜಯಪುರ ನಗರದ ಶಿವಾನಂದ ತಳಸದಾರ ಎಂಬುವರ ಮೊಬೈಲ್ ನಿನ್ನೆ ಕಳುವಾಗಿತ್ತು. ಈ ಕುರಿತು ಅವರು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರಿಗೆ ದೂರು ನೀಡಿದ್ದರು. ನಿನ್ನೆ ಮೊಬೈಲ್ ಕಳುವಾದ ಬಳಿಕ ಅದನ್ನು ಕದ್ದಿದ್ದ ಕಳ್ಳರು ಸ್ವಿಚ್ಡ್ ಆಫ್ ಮಾಡಿದ್ದರು. ಆದರೆ, ಶಿವಾನಂದ ತಳಸದಾರ ತಮ್ಮ ಮೊಬೈಲಿನಲ್ಲಿ ಮೊಬೈಲ್ ಟ್ರ್ಯಾಕರ್ ಸಾಫ್ಟವೇರ್ ಅಳವಡಿಸಿದ್ದರು. ಅಲ್ಲದೇ, ತಮ್ಮ ಮೊಬೈಲಿನಲ್ಲಿ ಅಲಾರ್ಮ್ ಇಟ್ಟಿದ್ದುರ. ಇಂದು ನಸುಕಿನ ಜಾವ ಈ ಮೊಬೈಲ್ ಅಟೋಮೆಟಿಕ್ ಆಗಿ ಅಲಾರ್ಮ್ ಆಗಿ ಈ ಸಂದೇಶವನ್ನು ಶಿವಾನಂದ ತಳಸದಾರ ಅವರ ಇನ್ನೋಂದು ಮೊಬೈಲಿಗೆ ಸಂದೇಶ ಬಂದಿದ್ದು, ಅದು ಲೊಕೇಶನ್ ತೋರಿಸಿದೆ.
ಈ ಲೊಕೇಶನ್ ಬೆನ್ನತ್ತಿದ ಸ್ವಾಮಿ ವಿವೇಕಾನನಂದ ಯುವ ಸೇನೆಯ ಕಾರ್ಯಕರ್ತರು, ಗಾಂಧಿಚೌಕ್ ಪೊಲೀಸರಿಗೆ ಮಾಹಿತಿ ನೀಡಿ ವಿಜಯಪುರ ನಗರದಲ್ಲಿರುವ ಖಾಸಗಿ ಹೋಟೇಲ್ ಮೇಲೆ ಧಾಳಿ ನಡೆಸಿದ್ದಾರೆ. ಇವರ ಧಾಳಿಯಿಂದ ವಿಚಲಿತರಾದ ಮಹಾರಾಷ್ಟ್ರದ ಇಚಲಕರಂಜಿ ಮೂಲದ ಮೂರು ಜನ ಆರೋಪಿಗಳು ಪರಾರಿಯಾದರೆ, ಮತ್ತೋಬ್ಬ ಆರೋಪಿ ಸೆರೆ ಸಿಕ್ಕಿದ್ದಾನೆ. ಆತನನ್ನು ವಿಚಾರಿಸಿದಾಗ ಕದ್ದ ಮೊಬೈಲ್ ಕಾರಿನಲ್ಲಿರುವುದು ಪತ್ತೆಯಾಗಿದೆ. ಆ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ದುಬಾರಿ ಬೆಲೆಯ 12 ಇತರ ಮೊಬೈಲ್ ಗಳು ಪತ್ತೆಯಾಗಿವೆ. ಅಲ್ಲದೇ, ಈ ಕಾರು ಕೂಡ ಕಳ್ಳತನ ಮಾಡಿರಬಹುದು ಎಂದು ಶಂಕಿಸಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ತಾನು ರೂ. 25000 ನೀಡುತ್ತೇನೆ. ನಿಮ್ಮ ಮೊಬೈಲ್ ನೀವೇ ಇಟ್ಟುಕೊಂಡು ತನ್ನನ್ನು ಬಿಟ್ಟು ಬಿಡುವಂತೆ ಗೋಳಾಡಿದ್ದಾನೆ. ಆದರೆ, ಆತನ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ದೃಢವಾಗಿ ನಿರ್ಧರಿಸಿದ ಯುವಕರು ಆರೋಪಿಯನ್ನು ಹಿಡಿದು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳರನ್ನು ವಿಜಯಪುರ ನಗರದ ಸ್ವಾಮಿ ವಿವೇಕಾನಂದ ಯುವಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಮತ್ತು ಸ್ನೇಹಿತರು ಹಿಡಿದು ಈಗ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರ ವಶಕ್ಕೆ ನೀಡಿದ್ದಾರೆ. ಪರಾರಿಯಾಗಿರುವ ಇತರ ಮೂರು ಜನ ಅಂತಾರಾಜ್ಯ ಮೊಬೈಲ್ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ. ಅಲ್ಲದೇ, ಈ ಕಳ್ಳರ ಗುಂಪು ಮತ್ತೆ ಎಲ್ಲಿಯಾದರೂ ಈ ಹಿಂದೆ ಇಂಥದ್ದೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದರ ಕುರಿತೂ ತನಿಖೆ ಆರಂಭಿಸಿದ್ದಾರೆ.
ಈ ಕುರಿತು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.