ಹೃದಯಸ್ಪರ್ಶಿ ಪತ್ರ ಬರೆದ ಶಾನ್ವಿ ಶ್ರೀವಾಸ್ತವ್ : ಕುತೂಹಲ ಮೂಡಿಸಿದ ‘ಶ್ರೀಮನ್ನಾರಾಯಣ’
ನಿರ್ದೇಶಕ ಮತ್ತು ನಟನಾಗಿ ಅಭಿಮಾನಿಗಳನ್ನು ಪೋಣಿಸುತ್ತಾ ಹೊರಟಿರುವ ರಕ್ಷಿತ್ ರ ಬಹು ನಿರೀಕ್ಷಿತ ಚಿತ್ರವಾಗಿರುವ ಶ್ರೀಮನ್ನಾರಾಯಣದಲ್ಲಿ ಶಾನ್ವಿ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಇದನ್ನು ಅವರು ತಮ್ಮ ಧ್ವನಿಯಲ್ಲಿ ಹೇಳಿಕೊಂಡು ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದಾರೆ.
ಪ್ರಾರಂಭವಾದಾಗಿನಿಂದ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಕುತೂಹಲ ಮೂಡಿಸುತ್ತಿದೆ. ರಕ್ಷಿತ್ ಇದರಲ್ಲಿ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದಷ್ಟೆ ಅಲ್ಲದೆ ಶಾನ್ವಿ ಮೊದಲನೆಯ ಬಾರಿಗೆ ಕನ್ನಡ ಚಿತ್ರಕ್ಕಾಗಿ ಕಂಠ ನೀಡಿದ್ದಾರೆ. ಕನ್ನಡದಲ್ಲಿ ಡಬ್ ಮಾಡುತ್ತಿದ್ದೇನೆ ಎಂದು ಮುದ್ದುಮುದ್ದಾಗಿ ಹೇಳಿರುವ ಆಡಿಯ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ಧನ್ಯವಾದ ಸಲ್ಲಿಸಿರುವ ಶಾನ್ವಿ ಪತ್ರವೂ ಕನ್ನಡಿಗರ ಮನ ಸೆಳೆಯುತ್ತಿದೆ.
ಈ ಚಿತ್ರದ ಮೇಲಿನ ನಿರೀಕ್ಷೆ ಜೊತೆ ಜೊತೆಗೆ ನಟಿ ಶಾನ್ವಿ ಕನ್ನಡದಲ್ಲಿ ಮಾತನಾಡುವುದನ್ನು ಕೇಳುವ ಕುತೂಹಲವೂ ಸಹ ದುಪ್ಪಟ್ಟಾದಂತಿದೆ.
ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ಮತ್ತು ಶಾನ್ವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶ್ರೀಮನ್ನಾರಾಯಣ ಚಿತ್ರವು ವಷಾಂತ್ಯದಲ್ಲಿ ಅಂದರೆ ಡಿಸೆಂಬರ್ 27 ರಂದು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಲಿದೆ. ಈ ಮಾಹಿತಿಯನ್ನು ಸ್ವತಃ ರಕ್ಷಿತ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
“ಶ್ರೀಮನ್ನಾರಾಯಣ ಡಿಸೆಂಬರ್ 27 ರಂದು ತೆರೆಗೆ ಬರುತ್ತಿದೆ”, ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಇದೇ ದಿನ ರಕ್ಷಿತ್ ತಮ್ಮ ಹಿಂದಿನ ಯಶಸ್ವಿ ಚಿತ್ರವಾದ ಕಿರಿಕ್ ಪಾರ್ಟಿ ಗೆ ಮೂರು ವರ್ಷಗಳು ತುಂಬುತ್ತವೆ. ಅದೂ ಕೂಡ ಡಿಸೆಂಬರ್ 27 ರಂದು ಬಿಡುಗಡೆಯಾಗಿತ್ತು. ಇದರ ಬಗ್ಗೆಯೂ ರಕ್ಷಿತ್ ಹೇಳಿಕೊಂಡಿದ್ದರು. “ನಾವು ಕಿರಿಕ್ ಪಾರ್ಟಿಯ ಮೂರು ವರ್ಷಗಳ ಸಂಭ್ರಮವನ್ನು ಆಚರಿಸಲಿದ್ದೇವೆ”, ಎಂದು ಬರೆದುಕೊಂಡಿದ್ದರು.
ಚಿತ್ರವು ಹಲವು ವಿಶೇಷಗಳಿಂದ ಕೂಡಿದೆ. ಚಿತ್ರವು ಬಹುಭಾಷೆಯಲ್ಲಿ ನಿರ್ಮಾಣವಾಗಿದೆ. ತೆಲುಗು ಅವತರಣಿಕೆಯ ಚಿತ್ರಕ್ಕೆ ಟಾಲಿವುಡ್ ನ ಖ್ಯಾತ ನಾಮ ಚಿತ್ರ ಸಾಹಿತಿಯಾದ ರಾಮಜೋಗಯ್ಯ ಶಾಸ್ತ್ರಿ ಗೀತ ರಚನೆ ಮಾಡಿದ್ದಾರೆ. ಇವರು ಈ ಮುನ್ನ ದರ್ಶನ್ ರ ಕುರುಕ್ಷೇತ್ರ ಮತ್ತು ಸುದೀಪ್ ರ ಪೈಲ್ವಾನ್ ಚಿತ್ರದ ತೆಲುಗು ಅವತರಣಿಕೆಯ ಚಿತ್ರಗಳಿಗೂ ರಾಮಜೋಗಯ್ಯ ಲೇಖನಿ ಹಿಡಿದಿದ್ದರು. ಈಗ ಕನ್ನಡಿಗರಿಗೆ ಧನ್ಯವಾದ ಹೇಳಿರುವ ಶಾನ್ವಿ ಪತ್ರವು ಎಲ್ಲೆಡೆ ವೈರಲ್ ಆಗಿದ್ದು ಶಾನ್ವಿಯ ಮಧುರ ಧ್ವನಿಯನ್ನು ಕೇಳಲು ಎಲ್ಲರೂ ಕಾತರರಾಗಿದ್ದಾರೆ. ಶಾನ್ವಿಯ ಡಬ್ಬಿಂಗ್ ನ್ನು ಕನ್ನಡಿಗರು ಹೇಗೆ ಸ್ವೀಕರಿಸಲಿದ್ದಾರೆ ಎದು ಕಾದು ನೋಡಬೇಕಿದೆ.
ಶ್ರೀಮನ್ನಾರಾಯಣ ಚಿತ್ರತಂಡವು ಅ.1 ರಿಂದಲೇ ಅಧಿಕೃತವಾಗಿ ಚಿತ್ರಕ್ಕೆ ಪ್ರಮೋಷನ್ ಕಾರ್ಯ ಆರಂಭಿಸಿದೆ. ನಿರ್ಮಾಪಕ ಮಲ್ಲಿಕಾರ್ಜುನಯ್ಯ ಹಲವು ನಿರ್ಮಾಣ ಸಂಸ್ಥೆಗಳೊಂದಿಗೆ ಚಿತ್ರ ಹಂಚಿಕೆಯ ಕುರಿತಂತೆ ಮಾತುಕತೆ ನಡೆಸಿದ್ದಾರೆ.
ಚಿತ್ರದ ಇತರೆ ಭಾಷೆಗಳ ಡಬ್ಬಿಂಗ್ ಕಾರ್ಯವು ಪ್ರಗತಿಯಲ್ಲಿದೆ. ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ತೆಲುಗಿನಲ್ಲೂ ಪೂರ್ಣಗೊಳ್ಳುವ ಹಂತದಲ್ಲಿದೆ. ಹಿಂದಿ ಭಾಷೆಯಲ್ಲಿ ಆರಂಭವಾಗಿದೆ.
ಸಚಿನ್ ರವಿ ಅವರು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಶ್ರೀಮನ್ನಾರಾಯಣ ಈ ಮುನ್ನ ನವೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತು.
80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಮನ್ನಾರಾಯಣ ಚಿತ್ರಕ್ಕೆ ಪುಷ್ಕರ ಮಲ್ಲಿಖಾರ್ಜುನಯ್ಯ ಮತ್ತು ಎ ಕೆ ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ರಾಗ ಸಂಯೋಜನೆ ಮಾಡಿದ್ದಾರೆ.
ಅವನೇ ಶ್ರೀಮನ್ನಾರಾಯಣ ನವಿರು ಪ್ರೇಮ ಮತ್ತು ಹಾಸ್ಯ ಮಿಶ್ರಿ ಕಥೆಯಾಗಿದೆ. ಕರ್ಮ್ ಚಾವ್ಲಾ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್ ಒಳಗೊಂಡಂತೆ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ತಾರಾಗಣದಲ್ಲಿದ್ದಾರೆ