ನಾನು ನೀರು ಕುಡೀತೀನಿ, ಅಂದವರಿಗೆ ನೀರು ಕುಡಿಸ್ತೀನಿ – ಡಿಕೆ ಶಿವಕುಮಾರ್

ನಾನು ಬಂಧನಕ್ಕೆ ಒಳಗಾದಾಗ ಯಾರ್ಯಾರು ಏನೇನು ಮಾತಾಡಿದ್ದಾರೆ ನನಗೆ ಅರಿವಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ವಿರುದ್ಧ ಮಾತನಾಡಿದವರ ವಿರುದ್ಧ ಕಿಡಿ ಕಾರಿದ್ದಾರೆ.

ನನ್ನ ಬಗ್ಗೆ ಮಾತನಾಡಿದ ಎಲ್ಲಾ ಮಾಹಿತಿಯನ್ನು ನಾನು ತರಿಸಿಕೊಂಡಿದ್ದೇನೆ. ಎಲ್ಲದಕ್ಕೂ ಉತ್ತರ ಕೊಡುವ ಶಕ್ತಿ ನನ್ನ ಬಳಿಯಿದೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಯಾರೂ ಪರ್ಮನೆಂಟಾಗಿ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ.
ಕೆಲವರು ಉಪ್ಪು ತಿಂದವನು ನೀರು ಕುಡಿಬೇಕು ಅಂದಿದ್ದಾರೆ. ನಾನು ನೀರು ಕುಡೀತೀನಿ, ಅಂದವರಿಗೆ ನೀರು ಕುಡಿಸ್ತೀನಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ನಾನು ಜೈಲಿಗೆ ಹೋದಾಗ ಕಣ್ಣೀರು ಹಾಕಿದವರ ಪೂಜೆಯ ಫಲ ನನಗೆ ತಟ್ಟಿದೆ. ಎಲ್ಲಾ ಅಗ್ನಿ ಪರೀಕ್ಷೆ ದಾಟಿ ಬರುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿದರು.

ನಮ್ಮ ಹದಿನೇಳು ಜನ ಸ್ನೇಹಿತರು ಯಡಿಯೂರಪ್ಪನವರಿಗೆ ಗಿಫ್ಟ್ ಕೊಟ್ಟಿದ್ದಾರೆ. ಮಹಾರಾಷ್ಟ್ರ, ಹರಿಯಾಣಾದಲ್ಲಿ ಏನಾಗುತ್ತಿದೆ ಎಂದು ಚರ್ಚೆ ಮಾಡಲ್ಲ. ಬೆಳಕು ಹೋದಮೇಲೆ ನಮ್ಮ ನೆರಳು ನಮ್ಮ ಹಿಂದೆ ಬರಲ್ಲ. ಹುಬ್ಬಳ್ಳಿ- ಧಾರವಾಡದ ಜನರು ತೋರಿಸಿದ ಪ್ರೀತಿ ಅವರ್ಣನೀಯ. ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೀನಿ. ಬಿಜೆಪಿ ನಾಯಕರಿಗೆ ಮಹದಾಯಿ ಯೋಜನೆ ಜಾರಿಗೆ ತರಲು ಆಗಿಲ್ಲ. ಗೆಜೆಟ್ ನೋಟಿಫಿಕೇಷನ್ ಮಾಡದೆ ರೈತರಿಗೆ ದ್ರೋಹ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ರೈತರು ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು. ಯಡಿಯೂರಪ್ಪನವರಿಗೆ ನಮ್ಮ ಕೆಲ ಸ್ನೇಹಿತರು ಗಿಫ್ಟ್ ಕೊಟ್ಟಿದ್ದಾರೆ‌ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದ್ದರೂ ಪಕ್ಷ ಬಿಟ್ಟರು. ನಮ್ಮನ್ನೇ ಬಿಟ್ಟಿಲ್ಲ, ಇನ್ನು ಬಿಜೆಪಿಯನ್ನು ಬಿಡ್ತಾರಾ? ಪ್ಯಾಂಟ್, ಶರ್ಟ್, ಜೇಬು ಹರಿದು ಹಾಕ್ತಾರೆ, ನೋಡ್ತಾ ಇರಿ‌ ಎಂದು ಮುನ್ನೆಚ್ಚರಿಕೆ ಕೊಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights