ದೇಶಕ್ಕೆ ಮೊದಲು: ತರಕಾರಿಗೆ ಬೆಂಬಲ ಬೆಲೆ ಘೋಷಿಸಿದ ಕೇರಳ!

ತರಕಾರಿಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕೇರಳ ಸರ್ಕಾರ ಘೋಷಿಸಿದ್ದು, ತರಕಾರಿಗೆ ಬೆಂಬಲ ಬೆಲೆ ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೇರಳ ಸರ್ಕಾರ 16 ಬಗೆಯ ತರಕಾರಿಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿದ್ದು, ಈ ಯೋಜನೆ ನವೆಂಬರ್ 1 ರಿಂದ ಜಾರಿಗೆ ಬರಲಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಮುಖ್ಯಮಂತ್ರಿ, “ರಾಜ್ಯದಲ್ಲಿ ಉತ್ಪಾದನೆಯಾಗುವ ತರಕಾರಿಗಳಿಗೆ ಬೆಂಬಲ ಬೆಲೆಯನ್ನು ನಿಗದಿಪಡಿಸುತ್ತಿರುವುದು ಇದೇ ಮೊದಲು ಮತ್ತು ಕೇರಳ ಬೆಂಬಲ ಬೆಲೆ ಘೋಷಿಸಿದ ಮೊದಲ ರಾಜ್ಯವಾಗಿದೆ. ಇದು ರೈತರಿಗೆ ಪರಿಹಾರ ಮತ್ತು ಬೆಂಬಲವನ್ನು ನೀಡಲಿದೆ” ಎಂದರು.

“ದೇಶಾದ್ಯಂತದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿದಿದೆ. ಆದರೆ ಕಳೆದ ನಾಲ್ಕೂವರೆ ವರ್ಷಗಳಿಂದ ನಾವು ರೈತರಿಗೆ ಬೆಂಬಲ ನೀಡಿದ್ದೇವೆ ಮತ್ತು ಸರ್ಕಾರವು ಪ್ರಾಥಮಿಕವಾಗಿ ರಾಜ್ಯದ ಕೃಷಿ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ” ಎಂದಿದ್ದಾರೆ.

“ಎಂಎಸ್‌ಪಿ ತರಕಾರಿ ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ 20 ರಷ್ಟು ಹೆಚ್ಚಾಗಿರುತ್ತದೆ. ರೈತರಿಂದ ಉತ್ಪನ್ನಗಳನ್ನು ಎಂಎಸ್‌ಪಿಯಲ್ಲಿ ಸಂಗ್ರಹಿಸಲಾಗುತ್ತದೆ. ಉತ್ಪನ್ನಗಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ಶ್ರೇಣೀಕರಿಸಲಾಗುತ್ತದೆ ಮತ್ತು ಗುಣಮಟ್ಟವನ್ನು ಆಧರಿಸಿ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಮೊದಲ ಹಂತದಲ್ಲಿ 16 ಬಗೆಯ ತರಕಾರಿಗಳನ್ನು ಒಳಗೊಳ್ಳಲಾಗುತ್ತಿದೆ. ಜೊತೆಗೆ ಎಂಎಸ್‌ಪಿಯನ್ನು ನಿಯಮಿತವಾಗಿ ಪರಿಷ್ಕರಿಸುವ ಅವಕಾಶವಿದೆ ”ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ತರಕಾರಿಗಳ ಖರೀದಿ ಮತ್ತು ವಿತರಣೆಯನ್ನು ಸಮನ್ವಯಗೊಳಿಸುವುದರಿಂದ ಈ ಯೋಜನೆಯಲ್ಲಿ ಸ್ಥಳೀಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

“ಈ ಯೋಜನೆಯು ಪ್ರತಿ ಋತುವಿಗೆ ಗರಿಷ್ಠ 15 ಎಕರೆ ತರಕಾರಿ ಕೃಷಿಯನ್ನು ಹೊಂದಿರುವ ರೈತನಿಗೆ ಪ್ರಯೋಜನವನ್ನು ನೀಡುತ್ತದೆ. ಬೆಂಬಲ ಬೆಲೆಯ ಲಾಭ ಪಡೆಯಲು ಅವರು ಬೆಳೆ ವಿಮೆ ಮಾಡಿದ ನಂತರ ಅವರು ಕೃಷಿ ಇಲಾಖೆಯ ನೋಂದಣಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ನವೆಂಬರ್ 1 ರಿಂದ ಪ್ರಾರಂಭವಾಗಲಿದೆ” ಎಂದಿದ್ದಾರೆ.

’ಈ ಯೋಜನೆಯು ಬೆಂಬಲ ಬೆಲೆಯೊಂದಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು ಮತ್ತು ಉತ್ಪನ್ನಗಳನ್ನು ಸಾಗಿಸಲು ಶೈತ್ಯೀಕರಿಸಿದ ವಾಹನಗಳಂತಹ ಸಂಪೂರ್ಣ ಪೂರೈಕೆ ಸರಪಳಿ ಪ್ರಕ್ರಿಯೆಯನ್ನು ಸ್ಥಾಪಿಸಲು ಯೋಜಿಸಿದೆ ”ಎಂದು ವಿಜಯನ್ ಹೇಳಿದರು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ತರಕಾರಿ ಉತ್ಪಾದನೆಯು ದ್ವಿಗುಣಗೊಂಡಿದೆ. ಅಂದರೆ 7 ಲಕ್ಷ ಮೆಟ್ರಿಕ್ ಟನ್ ನಿಂದ 14.72 ಲಕ್ಷ ಮೆಟ್ರಿಕ್ ಟನ್ ತರಕಾರಿ ಉತ್ಪಾದನೆಯಾಗಿದೆ. “ಈ ವರ್ಷ ಹೆಚ್ಚುವರಿಯಾಗಿ 1 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದೆ” ಎಂದು ಕೇರಳ ಮುಖ್ಯಮಂತ್ರಿ ತಿಳಿಸಿದ್ದಾರೆ.


ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣ ಹೈಟೆಕ್‌ ಕ್ಲಾಸ್‌ರೂಂಗಳನ್ನು ಹೋಂದಿರುವ ಏಕೈಕ ರಾಜ್ಯ ಕೇರಳ: ಪಿಣರಾಯಿ ವಿಜಯನ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights