ಗಡಿ ಭಾಗಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ : ರೈತರನ್ನು ಚದುರಿಸಲು ಪೊಲೀಸರು ಹರಸಾಹಸ!
ನವದೆಹಲಿಯಲ್ಲಿ ನೂರಾರು ರೈತರ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೆ ಗಡಿ ಭಾಗಗಳಲ್ಲಿ ಇಂದು ರಾತ್ರಿ 12 ವರೆಗೆ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಿದೆ. ಗೃಹ ಇಲಾಖೆ ಘಾಜಿಪುರ, ಸಿಂಘು, ಟಿಕ್ರಿ ಸೇರಿದಂತೆ ಕೆಲವೆಡೆ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿದೆ.
ರೈತರ ಗುಂಪುಗಳನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ 3 ಸುತ್ತಿನ ಉನ್ನತ ಸಭೆ ರೈತರೊಂದಿಗೆ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ನಡೆಸಿದ್ದಾರೆ. ದೆಹಲಿಯ ಕೆಂಪು ಕೋಟೆಯಲ್ಲಿ ರೈತರ ಧ್ವಜವನ್ನು ನೆಟ್ಟ ರೈತರ ನಡೆ ಆತಂಕವನ್ನು ಸೃಷ್ಟಿಸಿದೆ. ಹೀಗಾಗಿ ಕೆಂಪುಕೋಟೆ ಸುತ್ತಮುತ್ತಲೂ ಪೊಲೀಸ್ ಬಿಗಿ ಬಂದೀಬಸ್ತ್ ಮಾಡಲಾಗಿದೆ.
ಕೆಂಪುಕೋಟೆಯ ಮೇಲೆ ಮುತ್ತಿಗೆ ಹಾಕಿ ರೈತ ಸಂಘಟನೆಗಳ ಬಾವುಟ ಹಾಕಿಸಿದ್ದು ಹಿಂಸಾಚಾರಕ್ಕೆ ತಿರುಗುವ ಆತಂಕ ಸೃಷ್ಟಿಯಾಗಿದೆ.
ಎಲ್ಲಾ ರೈತರ ಸಂಘಟನೆಗಳು ಮುಖಂಡರು ಹೇಳುವ ಪ್ರಕಾರ, ‘ನಾವು ಇಂತಹ ಶಾಂತಿ ಕದಡುವ ಕೆಲಸ ಮಾಡುವುದಿಲ್ಲ. ಈತನಕ ನಾವು ಶಾಂತಿಯುತವಾಗಿ ಹೋರಾಟ ಮಾಡಿದ್ದೇವೆ. ಪ್ರತಿಭಟನೆ ವೇಳೆ ನಡೆದ ಗಲಭೆ ರೈತರಿಂದಾಗಿದ್ದಲ್ಲ’ ಎಂದು ರೈತರ ಸಂಘಟನೆಗಳ ಮುಖಂಡರು ಹೇಳಿಕೊಂಡಿದ್ದಾರೆ. ಆದರೆ ದೆಹಲಿ ಕೊಂಪುಕೋಟೆಯಿಂದ ಸಂಸತ್ ಬಳಿ ಹೊರಟ ಪ್ರತಿಭಟನೆಕಾರರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಕತ್ತಲಾಗುತ್ತಾ ಬಂದರೂ ಇವರು ಚದರುತ್ತಿಲ್ಲ. ವಾಪಸ್ಸು ಹೋಗುತ್ತಿಲ್ಲ. ಬದಲಿಗೆ ಕೆಂಪುಕೋಟೆಯಿಂದ ಸಂಸತ್ ಗೆ ಹೋಗುವ ದಾರಿಯಲ್ಲಿ ಗುಂಪುಗಟ್ಟಿ ನಿಂತುಕೊಂಡಿದ್ದಾರೆ. ಆದರೆ ಪ್ರತಿಭಟನಾ ನಿರತ ರೈತರು ಈಗಾಗಲೇ ಗಡಿ ಸೇರಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ನವದೆಹಲಿ ಹೃದಯ ಭಾಗದಲ್ಲಿ ಪ್ರತಿಭಟನೆಗೆ ನಿಂತವರು ಯಾರು ಎನ್ನುವ ಪ್ರಶ್ನೆ ಹುಟ್ಟಿದೆ. ಒಂದು ವೇಳೆ ಈ ಗುಂಪು ಮುನ್ನುಗ್ಗಲು ಪ್ರಯತ್ನಿಸಿದೆ ಮತ್ತೆ ಹಿಂಸಚಾರ ಭುಗಿಲೇಳುವುದರಲ್ಲಿ ಅನುಮಾನವಿಲ್ಲ.