Ground Report: “ಟ್ರ್ಯಾಲಿ” ಎಂಬ ಬಂಡಿಯಲ್ಲಿ ಬದುಕು ಕಟ್ಟಿದ ಅನ್ನದಾತ…!

ಐತಿಹಾಸಿಕ ರೈತ ಹೋರಾಟದಲ್ಲಿ ರೈತರ ಜೀವನದ ಬಹುಭಾಗವನ್ನು ಆವರಿಸಿರುವುದು ಟ್ರ್ಯಾಲಿಗಳು. ಕೃಷಿ ಕ್ಷೇತ್ರದಲ್ಲಿ ಉಳುಮೆ ಮಾಡುವ, ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಪಾತ್ರ ವಹಿಸುತ್ತಿದ್ದ ಈ ಟ್ರ್ಯಾಕ್ಟರ್‌ಗಳ ಟ್ರ್ಯಾಲಿಗಳು ಈಗ ಹೋರಾಟನಿರತ ರೈತರ ವಾಸ್ತವ್ಯವಾಗಿ ಮಾರ್ಪಾಡಾಗಿವೆ.

ದೊಡ್ಡ ಹೋರಾಟಕ್ಕೆ ಸಾಕ್ಷಿಯಾಗಿರುವ ಸಿಂಘು ಗಡಿ, ಟಿಕ್ರಿ ಬಾರ್ಡರ್‌, ದಾರುಹೇರಾ ಬಾರ್ಡರ್‌ಗಳಲ್ಲಿ ಈ ಟ್ರ್ಯಾಲಿಗಳ ಪಾತ್ರ ಅತಿ ಮಹತ್ವದ್ದು. ಶಹಜಾನ್‌ಪುರ್‌, ಗಾಜಿಯಾಪುರ್ ಮತ್ತು ಚಿಲ್ಲಾ (ನೊಯಿಡಾ ಗೇಟ್)ಗಳಲ್ಲಿ ಟ್ರ್ಯಾಲಿ ಮತ್ತ ಟೆಂಟ್‌ ಎರಡರ ಬಳಕೆಯು ಇದೆ.

ಪ್ರತಿಭಟನಾ ಸ್ಥಳಗಳಲ್ಲಿ ರೈತರು ಮತ್ತು ಪ್ರತಿಭಟನಾಕಾರರ ಬೆಂಬಲಿಗರ ಮನೆಗಳಾಗಿ ಮಾರ್ಪಾಡಾಗಿರುವ ಟ್ರ್ಯಾಲಿಗಳ ಒಳ ವಿನ್ಯಾಸವನ್ನು ತಮಗೆ ಅನುಕೂಲವಾಗುವಂತೆ ಬದಲಿಸಿಕೊಂಡಿದ್ದಾರೆ. ಚಳಿ, ಅತಿಯಾದ ಗಾಳಿ ಮತ್ತು ಮಳೆಗೆ ಜಗ್ಗದಂತಹ ಟ್ರ್ಯಾಲಿಗಳ ಮರುನಿರ್ಮಾಣ ಕೂಡ ಕೊಂಚ ಕಷ್ಟದ ಕೆಲಸವೆ. ಆದರೂ ಉತ್ತಮ ಟ್ರ್ಯಾಲಿಗಳನ್ನು ರೈತರು ಕಟ್ಟಿದ್ದಾರೆ.

ಟ್ರ್ಯಾಲಿಗಳಲ್ಲಿ ವಾಸಿಸುವವರಿಗೆ ಬೇಕಾದ ವಿದ್ಯುತ್‌ ದೀಪಗಳ ವ್ಯವಸ್ಥೆ, ಚಾರ್ಜಿಂಗ್‌ ವ್ಯವಸ್ಥೆ, ಮಲಗಲು ಸ್ಥಳ, ಹೊದಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಹೊರಗಡೆಯಿಂದ ಗಾಳಿ ಒಳಗೆ ಹೋಗದಂತೆ ತಡೆಯಲು ದಪ್ಪದ ಟಾರ್ಪಾಲ್‌ಗಳನ್ನು ಜೋಡಿಸಿದ್ದಾರೆ. ಇನ್ನು ಟ್ರ್ಯಾಲಿ ಹತ್ತಲು ಮತ್ತು ಇಳಿಯಲು ಉಪಯೋಗವಾಗುವಂತೆ ಮರದ ಮೆಟ್ಟಿಲುಗಳನ್ನು ಮಾಡಿ ಅದನ್ನು ಟ್ರ್ಯಾಕ್ಟರ್‌ಗಳಿಗೆ ಜೋಡಿಸಲಾಗಿದೆ.

ಕೆಲವು ಟ್ರ್ಯಾಲಿಗಳಲ್ಲಿ ಹಾಸಿಗೆ ಹಾಸುವ ಜಾಗದಲ್ಲಿ ಮೊದಲು ಭತ್ತದ ಹುಲ್ಲು ಹಾಕಲಾಗಿದೆ. ಹುಲ್ಲಿನ ಮೇಲೆ ಟಾರ್ಪಾಲ್‌ ಅದರ ಮೇಲೆ ಹಾಸಿಗೆ ನಂತರ ಅದರ ಮೇಲೆ ಬೆಡ್‌ಶೀಟ್‌ಗಳನ್ನು ಹಾಕಲಾಗುತ್ತದೆ. ಇದು ಬೆಚ್ಚಗಿನ ಅನುಭವ ನೀಡುತ್ತದೆ. ಹಾಗಾಗಿ ಹಾಸಿದ್ದೇವೆ ಎಂದು ರೈತರು ಹೇಳುತ್ತಾರೆ. ಮಕ್ಕಳು, ಮಹಿಳೆಯರ ಸುರಕ್ಷತೆಗೂ ಹೆಚ್ಚು ಆದ್ಯತೆ ನೀಡಬೇಕಾಗಿರುವುದರಿಂದ ಟ್ರ್ಯಾಲಿಗಳನ್ನು ಮತ್ತಷ್ಟು ಗಟ್ಟಿಯಾಗಿ ನಿರ್ಮಿಸಿರುತ್ತಾರೆ.

ಟ್ರ್ಯಾಲಿಗಳನ್ನು ನಿರ್ಮಿಸಿರುವ ಟ್ರ್ಯಾಕ್ಟರ್‌ಗಳು ನಮ್ಮ ಭಾಗದ ಟ್ರ್ಯಾಕ್ಟರ್‌ಗಳ ರೀತಿಯಲ್ಲಿ ಟೊಳ್ಳಾಗಿರದೆ, ಗಟ್ಟಿ ಮುಟ್ಟಾಗಿ ಇರುತ್ತವೆ. ಲಾರಿಗಳ ರೀತಿಯಲ್ಲಿ ಇಲ್ಲಿನ ಟ್ರ್ಯಾಕ್ಟರ್‌ಗಳಿರುವುದು ನಾವು ಗಮನಿಸಿದ್ದೇವೆ. ತಮ್ಮ ಮನೆಯ ಸದಸ್ಯನಂತೆ ಟ್ರ್ಯಾಕ್ಟರ್‌ಗಳನ್ನು ನೋಡಿಕೊಳ್ಳುವುದಾಗಿ ಇಲ್ಲಿನ ಜನ ಹೇಳುತ್ತಾರೆ.

ದೇವರಿಗೆ ಪೂಜೆ ಮಾಡುವಂತೆ ದಿನ ಟ್ರ್ಯಾಕ್ಟರ್‌ಗಳಿಗೂ ಇಲ್ಲಿನ ರೈತರು ಪೂಜೆ ಸಲ್ಲಿಸುತ್ತಾರೆ. ಹೊಲದಲ್ಲಿ ನಮ್ಮ ಕೃಷಿ ಜೀವನದ ಪ್ರಮುಖ ಅಂಗವಾಗಿದ್ದ ಟ್ರ್ಯಾಕ್ಟರ್‌ಗಳು, ಈ ನಮ್ಮ ಐತಿಹಾಸಿಕ ಹೋರಾಟದಲ್ಲಿಯೂ ನಮ್ಮ ಕೈ ಬಿಟ್ಟಿಲ್ಲ. ಇಲ್ಲೂ ನಮ್ಮ ಜೊತೆಗೆ ಪ್ರತಿಭಟನೆಯಲ್ಲಿ ನಮ್ಮ ಮನೆಗಳಾಗಿ ತಮ್ಮ ಕಾರ್ಯನಿವರ್ಹಿಸುತ್ತಿವೆ ಎಂದು ರೈತರು ಮನದುಂಬಿ ಹೇಳಿದ್ದಾರೆ.

ಜನವರಿ 7ರ ಟ್ರ್ಯಾಕ್ಟರ್‌ ಮಾರ್ಚ್‌ ಪೂವಾಭ್ಯಾಸದಲ್ಲೂ ಸಾಥ್‌ ನೀಡಿರುವ ಇವುಗಳು ಮುಂದೆ ಜನವರಿ 26ರ ಗಣರಾಜ್ಯೋತ್ಸವದಂದು ನಡೆಯಲಿರುವ ಐತಿಹಾಸಿಕ ಟ್ರ್ಯಾಕ್ಟರ್‌ ರ್ಯಾಲಿಯಲ್ಲೂ ನಮ್ಮ ಶಕ್ತಿ ಪ್ರದರ್ಶನಕ್ಕೆ ಸಾಥ್‌ ನೀಡಲಿವೆ.

ಪಂಜಾಬ್‌, ಹರಿಯಾಣ, ರಾಜಸ್ಥಾನ, ಕೇರಳದಿಂದಳು ಈಗಾಗಲೇ ಸಾವಿರಾರು ಟ್ರ್ಯಾಕ್ಟರ್‌ಗಳು ದೆಹಲಿಯತ್ತ ಬರುತ್ತಿವೆ. ಇವು ನಮ್ಮ ಟ್ರ್ಯಾಕ್ಟರ್‌, ಟ್ರ್ಯಾಲಿ ಮಾತ್ರವಲ್ಲ ನಮ್ಮ ಜೀವನದ ಸಾಥಿ (ಗೆಳೆಯ) ಎಂದು ರೈತರು ವಿಶ್ವಾಸ ವ್ಯಕ್ತಪಡಿಸುತ್ತಾರೆ.


ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ನೇಮಿಸುವ ಯಾವ ಸಮಿತಿಗೂ ನಾವು ಹೋಗುವುದಿಲ್ಲ: ಹೋರಾಟನಿರತ ರೈತರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights