ಕೊರೊನಾ ಮಧ್ಯೆ ಗಣೇಶೋತ್ಸವಕ್ಕೆ ಪರ-ವಿರೋಧ : ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ!
ಕೊರೊನಾ 3ನೇ ಅಲೆ ಮಧ್ಯೆ ಈ ಬಾರಿ ಗಣೇಶ ಹಬ್ಬದ ಆಚರಣೆಗೆ ಪರ ಮತ್ತು ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕಾ? ಬೇಡವಾ? ಎನ್ನುವ ಬಗ್ಗೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಹಬ್ಬದ ಆಚರಣೆ ಬಗ್ಗೆ ತಜ್ಞರ ಕೆಲ ಸಲಹೆಗಳನ್ನು ಸಿಎಂ ಪಡೆಯಲಿದ್ದು, ರಾಜ್ಯದಲ್ಲಿ ಯಾವ ಸ್ವರೂಪದ ಹಬ್ಬ ಆಚರಣೆಯಾಗಬೇಕು ಎನ್ನುವ ಬಗ್ಗೆ ಚರ್ಚಿಸಲು ಇಂದು ಅತ್ಯಂತ ಮಹತ್ವದ ಸಭೆ ಕರೆಯಲಾಗಿದೆ. ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿ, ಬಿಬಿಎಂಪಿ ಮುಖ್ಯ ಆಯುಕ್ತರು, ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಕೂಡ ಸಭೆಯಲ್ಲಿ ಇರಲಿದ್ದಾರೆ.
ಈಗಾಗಲೇ ಗಣೇಶ ಹಬ್ಬ ಆಚರಣೆಗೆ ಅನುವು ಮಾಡಿಕೊಡುವಂತೆ ಒತ್ತಡ ಕೂಡ ಸಿಎಂ ಮೇಲಿದೆ. ಕೊರೊನಾ ಮೂರನೇ ಅಲೆಯ ಅಪಾಯ ಕಣ್ಣೇದುರು ಇರುವಾಗ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದು ದೊಡ್ಡ ಸವಾಲಾಗಿದೆ. ಗಣೇಶ ಹಬ್ಬಕ್ಕೆ ಷರತ್ತು ಬದ್ಧ ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಸರ್ಕಾರ ವಿಧಿಸುವ ಷರತ್ತುಗಳು ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ.
ಸರ್ಕಾರ ಒಂದು ವೇಳೆ ಷರತ್ತು ಬದ್ಧ ಅನುಮಾತಿ ಕೊಟ್ಟು ಸೋಂಕು ಅಧಿಕವಾದರೆ ಅಪಾಯ ತಪ್ಪಿದ್ದಲ್ಲ. ಅಥವಾ ಸೋಂಕು ಹೆಚ್ಛಾಗದೆ ಹಬ್ಬ ಆಚರಣೆಗೆ ಅವಕಾಶ ಕೊಟ್ಟಿಲ್ಲ ಅಂದರೂ ಕಷ್ಟವೇ.
ಈಗಾಗಲೇ ಮನೆಯಲ್ಲಿ ಹಬ್ಬ ಆಚರಣೆಗೆ ಯಾವುದೇ ಅಡ್ಡಿಯಿಲ್ಲ. ಆದರೆ ದೇವಸ್ಥಾನ, ಗಲ್ಲಿಗಳಲ್ಲಿ, ಮೈದಾನಗಳಲ್ಲಿ, ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವುದು ಬಹುದೊಡ್ಡ ಸವಾಲಾಗಿದೆ. ಹಿಂದುಪರ ಸಂಘಟನೆಗಳು, ಸ್ವಪಕ್ಷಿಗಳು ಹಬ್ಬ ಆಚರಣೆಗೆ ಅನುಮತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಹೀಗಾಗಿ ಮುಂದಾಗುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.