BJP ಸರ್ಕಾರದ ಪರ ಒಂದೇ ರೀತಿ ಟ್ವೀಟ್ ಮಾಡಿದ ಸೆಲೆಬ್ರಿಟಿಗಳು: ತನಿಖೆಗೆ ಮಹಾ ಸರ್ಕಾರ ಆದೇಶ!
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಿಸಿದ್ದ ಅಂತಾರಾಷ್ಟ್ರೀಯ ಸೆಸೆಲೆಬ್ರಿಟಿಗಳ ವಿರುದ್ದ ಭಾರತೀಯ ಹಲವು ಸೆಲೆಬ್ರಿಟಿಗಳು ಒಂದೇ ತರದ ಟ್ವೀಟ್ ಮಾಡಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು. ಈ ವಿಚಾರವಾಗಿ ಎಲ್ಲರೂ ಒಂದೇ ರೀತಿಯ ಟ್ವೀಟಿ ಮಾಡಿರುವ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಅದೇಶ ನೀಡಿದೆ.
ಪ್ರತಿಭಟನಾ ನಿರತ ರೈತರ ಮೇಲೆ ಸರ್ಕಾರ ವಿವಿಧ ರೀತಿಯಲ್ಲಿ ದಾಳಿ ನಡೆಸಿತ್ತು. ಅದನ್ನು ಖಂಡಿಸಿ, ಅಮೆರಿಕದ ಪಾಪ್ ತಾರೆ ರಿಹಾನ್ನ ಕೇವಲ ಆರು ಪದಗಳಲ್ಲಿ ಟ್ವೀಟ್ ಮಾಡಿದ್ದರು. ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಕೂಡ ರೈತ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದು ಇಡೀ ವಿಶ್ವಾದಾದ್ಯಂತ ವೈರಲ್ ಆಗಿ ಭಾರತ ಸರ್ಕಾರಕ್ಕೆ ಮುಜುಗರ ತಂದಿತ್ತು.
ಇದರಿಂದಾಗಿ ಬೆಚ್ಚಿಬಿದ್ದ ವಿದೇಶಾಂಗ ಸಚಿವಾಲಯವು ಇದು ಭಾರತದ ಆಂತರಿಕ ವಿಷಯ ವಿದೇಶಿಗರು ತಲೆಹಾಕಬಾರದು ಎಂದು ಹೇಳಿಕೆ ನೀಡಿತ್ತು. ಅಲ್ಲದೆ ‘ಪ್ರೊಪಗಂಡಾ ವಿರುದ್ದ ಭಾರತ’ ಎಂಬ ಹ್ಯಾಷ್ಟ್ಯಾಗ್ ನೀಡಿತ್ತು. ನಂತರ ಒಂದೇ ರೀತಿಯ ಹೇಳಿಕೆ ಮತ್ತು ಹ್ಯಾಷ್ಟ್ಯಾಗ್ ಬಳಸಿ ಸಚಿನ್, ಲತಾ ಮಂಗೇಶ್ಕರ್, ಅಕ್ಷಯ್ ಕುಮಾರ್, ವಿರಾಟ್ ಕೊಹ್ಲಿ, ಸೈನಾ ನೆಹವಾಲ್, ಅಜಯ್ ದೇವಗನ್ ಸೇರಿ ಹಲವರು ಟ್ವೀಟ್ ಮಾಡಿದ್ದರು.
ಈ ಸೆಲೆಬ್ರಿಟಿಗಳು ಈ ರೀತಿ ಒಂದೇ ಥರನಾಗಿ, ಒಂದೇ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡುವಂತೆ ಸರ್ಕಾರ ಅವರ ಮೇಲೆ ಒತ್ತಡ ಹೇರಲಾಗಿತ್ತೆ” ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್ ಒತ್ತಾಯಿಸಿದ್ದರು. ಹೀಗಾಗಿ, ಸೆಲೆಬ್ರಿಟಿಗಳ ಒಂದೇ ಥರದ ಟ್ವೀಟ್ ಮಾಡಿರುವುದರ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶ್ಮುಖ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಸಚಿನ್ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ: ಆರ್ಜೆಡಿ ನಾಯಕ ಶಿವಾನಂದ್ ತಿವಾರಿ
ಟ್ವೀಟ್ಗಳಲ್ಲಿ ಎಲ್ಲರ ವಾಕ್ಯಗಳು ಒಂದೇ ರೀತಿ ಇದ್ದವು. ಯಾವುದೇ ಪದಗಳ ವ್ಯತ್ಯಾಸವಿರಲಿಲ್ಲ. ಒಂದೇ ಸಮಯದಲ್ಲಿ ಟ್ವೀಟ್ ಮಾಡಲಾಗಿದೆ. ಇದು ಗಂಭೀರ ವಿಷಯ. ಸಾವಂತ್ ಎತ್ತಿರುವ ಆಕ್ಷೇಪಗಳಿಗೆ ನಮ್ಮ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸುತ್ತೇವೆ ಎಂದು ದೇಶ್ಮುಖ್ ಹೇಳಿದ್ದಾರೆ.
ಸಚಿನ್ ಸಾವಂತ್ ಮಾತನಾಡಿ amicable ಎಂಬ ಪದವನ್ನು ಈ ಎಲ್ಲಾ ಸೆಲೆಬ್ರಿಟಿಗಳು ಸಹ ಬಳಸಿದ್ದಾರೆ. ಬಿಜೆಪಿ ಅವರ ಮೇಲೆ ಈ ರೀತಿ ಮಾಡುವಂತೆ ಒತ್ತಡ ಹೇರಿತ್ತೆ? ಅವರೆಲ್ಲರಿಗೂ ಈಗ ರಕ್ಷಣೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ 74 ದಿನಗಳಿಂದ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ರೈತರ ಹೋರಾಟ ತಡೆಯಲು ಇಂಟರ್ನೆಟ್ ಕಡಿತ, ರಸ್ತೆಗಳಲ್ಲಿ ಮುಳ್ಳು ನೆಡುವುದು ಮಾಡಿತ್ತು. ಇದನ್ನು ವಿರೋಧಿಸಿ ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳು ರೈತರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಸಚಿನ್, ಮಂಗೇಶ್ಕರ್ರಿಂದ ಟ್ವೀಟ್ ಮಾಡಿಸಿದ ಸರ್ಕಾರ, ಅವರ ಮರ್ಯಾದೆ ಕಳೆದಿದೆ: ರಾಜ್ ಠಾಕ್ರೆ