ಬ್ರಾಹ್ಮಣ ಮತ್ತು ಬನಿಯಾಗಳು ನನ್ನ ಕಿಸೆಯಲ್ಲಿದ್ದಾರೆ: ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ
‘ಬ್ರಾಹ್ಮಣ ಮತ್ತು ಬನಿಯಾ ಸಮುದಾಯದ ಜನರು ನನ್ನ ಜೇಬಿನಲ್ಲಿನದ್ದಾರೆ’ ಎಂದು ಬಿಜೆಪಿ ನಾಯಕ ಪಿ. ಮುರಳೀಧರ ರಾವ್ ಹೇಳಿದ್ದು, ಅವರ ಈ ಹೇಳಿಕೆಯು ಭಾರೀ ಗದ್ದಲಕ್ಕೆ ಕಾರಣವಾಗಿದೆ. ರಾವ್ ಅವರು ಆ ಸಮುದಾಯಗಳಿಗೆ ಕ್ಷಮೆಯಾಚಿಸಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಒತ್ತಾಯಿಸಿದೆ.
ಮಧ್ಯಪ್ರದೇಶದ ಉಸ್ತುವಾರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ರಾವ್ ಅವರ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ವಾಗ್ದಾಳಿ ನಡೆಸಿದ್ದು, ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಾವ್, ವಿರೋಧ ಪಕ್ಷವು ತನ್ನ ಹೇಳಿಕೆಯನ್ನು ‘ತಿರುಚಿದೆ’ ಎಂದು ಹೇಳಿದ್ದಾರೆ.
ಭೋಪಾಲ್ನಲ್ಲಿರುವ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಪಕ್ಷ ಮತ್ತು ಸರ್ಕಾರವು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲೆ ವಿಶೇಷ ಗಮನಹರಿಸಲಿವೆ. ನಮ್ಮ ಕಾಳಜಿ ಈ ಸಮುದಾಯದ ಜನರಿಗೆ ಉದ್ಯೋಗ ಮತ್ತು ಶಿಕ್ಷಣವನ್ನು ಒದಗಿಸುವುದು. ಈ ಮೂಲಕ ಹಿಂದುಳಿದಿರುವ ಸಮುದಾಯಗಳ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಕೆಲಸ ಮಾಡುತ್ತೇವೆ ಹೊರತು ವೋಟ್ ಬ್ಯಾಂಕ್ಗಾಗಿ ಅಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಮಾತನಾಡಿ, ಬಿಜೆಪಿ ಪಕ್ಷದ ಘೋಷಣೆಯು ‘ಎಲ್ಲರೊಂದಿಗೆ, ಪ್ರತಿಯೊಬ್ಬರ ಅಭಿವೃದ್ಧಿಗಾಗಿ’ (ಸಾಥ್, ಸಬ್ ಕಾ ವಿಕಾಸ್) ಆಗಿರುವ ಸಮಯದಲ್ಲಿ, ರಾವ್ ಅವರು ಎಸ್ಸಿ/ಎಸ್ಟಿಗಳಿಗೆ ವಿಶೇಷ ಗಮನ ನೀಡುವ ಬಗ್ಗೆ ಮಾತನಾಡುತ್ತಿದ್ದೀರ. ಆದರೆ ಬಿಜೆಪಿಯು ‘ಬ್ರಾಹ್ಮಣ-ಬನಿಯಾ’ಗಳ ಪಕ್ಷವಾಗಿದೆ ಎಂಬ ಗ್ರಹಿಕೆ ಇದೆ. ಅದರ ಬಗ್ಗೆ ನೀವು ಏನು ಹೇಳುತ್ತೀರಿ?’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಂಡ್ಯ: ದಲಿತ ಯುವಕನನ್ನು ಹಸುವಿನೊಂದಿಗೆ ಕಟ್ಟಿ, ಹಲ್ಲೆ ನಡೆಸಿ ಜಾತಿ ದೌರ್ಜನ್ಯ
ಪತ್ರಕರ್ತರ ಪ್ರಶ್ನೆಗೆ ಮುರಳೀಧರ ರಾವ್, ತಮ್ಮ ಕುರ್ತಾದ ಜೇಬಿನತ್ತ ತೋರಿಸುತ್ತಾ, ‘ಬ್ರಾಹ್ಮಣರು ಮತ್ತು ಬನಿಯಾಗಳು ನನ್ನ ಜೇಬಿನಲ್ಲಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ವೋಟ್ ಬ್ಯಾಂಕ್ ಇದೇ ವರ್ಗದವರು ಹೆಚ್ಚಾಗಿರುವುದರಿಂದ ನೀವು (ಮಾಧ್ಯಮ) ನಮ್ಮನ್ನು ಬ್ರಾಹ್ಮಣ ಮತ್ತು ಬನಿಯಾ ಪಕ್ಷ ಎಂದು ಕರೆದಿದ್ದೀರಿ’ ಎಂದು ಪ್ರತಿಕ್ರಿಯಿಸಿದರು.
‘ಕೆಲವು ವಿಭಾಗಗಳಿಗೆ ಸೇರಿದವರ ಸಂಖ್ಯೆ ಹೆಚ್ಚಿದ್ದಾಗ ಜನರು ಪಕ್ಷ ಅವರದ್ದೇ ಎಂದು ಹೇಳುತ್ತಿದ್ದರು. ನಮ್ಮ ಪಕ್ಷದಲ್ಲಿ ಎಸ್ಸಿ/ಎಸ್ಟಿ ಸಮುದಾಯದವರ ಪ್ರಾತಿನಿಧ್ಯ ಕಡಿಮೆಯಿದ್ದು, ಅವರನ್ನು ನಮ್ಮೊಟ್ಟಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಎಲ್ಲರನ್ನು ತಲುಪುತ್ತಿದದ್ದು ಬಿಜೆಪಿಯನ್ನು ಎಲ್ಲಾ ವರ್ಗದ ಪಕ್ಷವನ್ನಾಗಿ ಮಾಡುತ್ತಿದ್ದೇವೆ’ ಎಂದು ಮುರಳೀಧರ ರಾವ್ ಅವರು ಹೇಳಿದರು.
ರಾವ್ ಅವರ ವಿವಾದಾತ್ಮಕ ಹೇಳಿಕೆಯ 6 ಸೆಕೆಂಡುಗಳ ವೀಡಿಯೋವನ್ನು ವಿರೋಧ ಪಕ್ಷದ ಹಲವಾರು ನಾಯಕರು ಸೇರಿದಂತೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕುರಿತು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿಯು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಘೋಷಣೆಯನ್ನು ನೀಡಿದೆ ಮತ್ತು ಅವರ ಪಕ್ಷದ ಪ್ರಧಾನ ಕಾರ್ಯದರ್ಶಿ ಬ್ರಾಹ್ಮಣರು ಮತ್ತು ಬನಿಯಾಗಳು ತಮ್ಮ ಜೇಬಿನಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ’ ಎಂದು ಹೇಳಿದರು.
‘ಬಿಜೆಪಿಯು ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳನ್ನು ತನಗೆ ಬೇಕಾದಂತೆ ಆಡಿಸುತ್ತಿದೆ. ಅದು ಈ ವರ್ಗಗಳಿಗೆ ಮಾಡಿದ ಅವಮಾನವಾಗಿದೆ. ಬಿಜೆಪಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ವರ್ಗಗಳಿಗೆ ಯಾವ ರೀತಿಯ ಗೌರವ ನೀಡುತ್ತಿದೆ? ಬಿಜೆಪಿ ನಾಯಕರು ಅಧಿಕಾರದ ದುರಹಂಕಾರಕ್ಕೆ ಒಳಗಾಗಿದ್ದಾರೆ’ ಎಂದರು.
‘ಬಿಜೆಪಿ ಈ ಸಮುದಾಯಗಳಿಗೆಗ ಕ್ಷಮೆಯಾಚಿಸಬೇಕು’ ಎಂದು ಕಮಲ್ ನಾಥ್ ಹೇಳಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಬಗ್ಗೆ ಮಾತನಾಡುವ ಪಕ್ಷ ಈಗ ಅಧಿಕಾರಕ್ಕಾಗಿ ಕೆಲವು ವರ್ಗಗಳ ಮೇಲೆ ಕೇಂದ್ರೀಕರಿಸುತ್ತಿದೆ,” ಎಂದು ಅವರು ಆರೋಪಿಸಿದರು.
ನಂತರ, ವೀಡಿಯೊ ಹೇಳಿಕೆಯಲ್ಲಿ ಮಾತನಾಡಿದ, ರಾವ್ ಅವರು ಕಾಂಗ್ರೆಸ್ಗೆ ಸತ್ಯ ಮತ್ತು ಹೇಳಿಕೆಗಳನ್ನು ’ತಿರುಚುವ’ ಅಭ್ಯಾಸವಿದೆ ಎಂದು ಹೇಳಿದರು.
‘ನಾವು ಸಮಾಜದ ವರ್ಗಗಳ ನಡುವೆ ತಾರತಮ್ಯ ಮಾಡುವುದಿಲ್ಲ. ಎಲ್ಲಾ ಭಾರತೀಯರು ಅಭಿವೃದ್ಧಿಯ ಭಾಗವಾಗಬೇಕು. ಕಾಂಗ್ರೆಸ್ ದ್ರೋಹ ಬಗೆದಿದೆ ಮತ್ತು ಸಮಾಜದ ಎಲ್ಲಾ ವರ್ಗಗಳನ್ನು ಒಡೆದಿದೆ, ಎಸ್ಟಿಗಳು ಹಿಂದುಳಿದಿದ್ದರೆ, ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂಬುದಷ್ಟೇ ಕಾರಣ.” ಎಂದು ಬಿಜೆಪಿ ಮುಖಂಡರು ತಿಳಿಸಿದರು.
ಇದನ್ನೂ ಓದಿ: ಕೇರಳ ವಿದ್ಯಾರ್ಥಿನಿ ಹೋರಾಟಕ್ಕೆ ಮಣಿದ ವಿವಿ; ಜಾತಿ ತಾರತಮ್ಯ ಎಸಗಿದ್ದ ಪ್ರಾಧ್ಯಾಪಕನ ವಜಾ!