‘ಬಿಜೆಪಿಯಲ್ಲಿ ಯಾರೇ ಸಿಎಂ ಆದ್ರೂ ಭ್ರಷ್ಟರೇ ಆಗೋದು’ – ಸಿದ್ದರಾಮಯ್ಯ
ರಾಜ್ಯದಲ್ಲಿ ಎರಡು ವರ್ಷ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಇಂದು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಯಡಿಯೂರಪ್ಪರಿಗೆ ಭ್ರಷ್ಟ ಎನ್ನುವ ಪಟ್ಟ ಕೊಟ್ಟಿದ್ದಾರೆ.
ಗದಗ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ರಾಜೀನಾಮೆ ಕೊಟ್ಟು ಇನ್ನೊಬ್ಬರು ಸಿಎಂ ಆಗುವುದಾದರೆ, ಒಬ್ಬ ಭ್ರಷ್ಟ ಹೋಗಿ ಮತ್ತೊಬ್ಬ ಭ್ರಷ್ಟ ಬರುತ್ತಾನೆ. ಯಡಿಯೂರಪ್ಪ ರಾಜ್ಯ ಕಂಡ ಭ್ರಷ್ಟ ರಾಜಕಾರಣಿ. ನಾಲ್ಕು ಬಾರಿ ಸಿಎಂ ಆದರೂ ಅವಧಿ ಪೂರೈಸಿಲ್ಲ. ಈಗ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ. ಬಿಜೆಪಿಯಲ್ಲಿ ಯಾರೇ ಸಿಎಂ ಆದ್ರೂ ಭ್ರಷ್ಟರೇ ಆಗೋದು’ ಎಂದು ಟೀಕಿಸಿದ್ದಾರೆ.
ನನ್ನ ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದಿದ್ರು. ಬಿಎಸ್ ವೈ ಸರ್ಕಾರ 30 ಪರ್ಸೆಂಟ್ ಸರ್ಕಾರ. ಅವರು ಹಣ ಕೊಟ್ಟು ಅಧಿಕಾರಕ್ಕೆ ಬಂದವರು. ರಾಜ್ಯ ಆರ್ಥಿಕವಾಗಿ ಹಾಳಾಗಿದೆ. ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಕಿಡಿಕಾರಿದರು.